ಮುಂಗಾರು ಮಳೆಗಾಲದ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಜಲಸಾಹಸ ಕ್ರೀಡೆಗಳು ಹಾಗೂ ನೀರಿನ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಈ ನಿಷೇಧವು ಜೂನ್ 1, 2026 ರಿಂದ ಆಗಸ್ಟ್ 31, 2026 ರವರೆಗೆ (ಒಟ್ಟು ಮೂರು ತಿಂಗಳ ಕಾಲ) ಜಾರಿಯಲ್ಲಿರಲಿದೆ. ಮಳೆಗಾಲದ ಅವಧಿಯಲ್ಲಿ ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಸಮಯದಲ್ಲಿ ನದಿಗಳಲ್ಲಿ ನೀರಿನ ಹರಿವು ಹಠಾತ್ ಹೆಚ್ಚಾಗುವುದು, ಆಕಸ್ಮಿಕ ಪ್ರವಾಹ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಜೊತೆಗೆ ಸಮುದ್ರದ ಅಲೆಗಳ ಅಬ್ಬರ ಮತ್ತು ಉಗ್ರತೆ ಹೆಚ್ಚಾಗುವ ಕಾರಣ ಹವಾಮಾನ ಸಂಬಂಧಿತ ಅಪಾಯಗಳನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಯಾವೆಲ್ಲಾ ಚಟುವಟಿಕೆಗಳಿಗೆ ಬ್ರೇಕ್?
ಪೊಲೀಸ್ ಇಲಾಖೆ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಈ ಕೆಳಗಿನ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ನಿಷೇಧಿಸಲಾಗಿದೆ:
- ನದಿ ರಾಫ್ಟಿಂಗ್ (River Rafting)
- ದೋಣಿ ವಿಹಾರ ಮತ್ತು ಇತರ ದೋಣಿ ಚಟುವಟಿಕೆಗಳು
- ಜೆಟ್ ಸ್ಕೀಯಿಂಗ್ (Jet Skiing) ಹಾಗೂ ಇತರೆ ಸಾಹಸ ಜಲಕ್ರೀಡೆಗಳು
- ಸ್ಕೂಬಾ ಡೈವಿಂಗ್ (Scuba Diving)
- ಸಮುದ್ರ, ನದಿಗಳು ಮತ್ತು ಜಲಾಶಯಗಳ ಆಧಾರಿತ ಎಲ್ಲಾ ರೀತಿಯ ಪ್ರವಾಸೋದ್ಯಮ ಮತ್ತು ಸಾಹಸಮಯ ಮನರಂಜನಾ ಚಟುವಟಿಕೆಗಳು.
“ಜೀವ ಅಮೂಲ್ಯ, ಜಾಗ್ರತೆ ಅತಿ ಮುಖ್ಯ”
“ಸುರಕ್ಷತೆ ನಮ್ಮ ಆದ್ಯತೆ. ಜೀವ ಅಮೂಲ್ಯ, ಜಾಗ್ರತೆ ಅತಿ ಮುಖ್ಯ” ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದೆ. ಹೊರಗಿನಿಂದ ಬರುವ ಪ್ರವಾಸಿಗರು ಹಾಗೂ ಸ್ಥಳೀಯರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಳೆಗಾಲದಲ್ಲಿ ನದಿ ಪಾತ್ರಗಳು, ಜಲಾಶಯಗಳು ಮತ್ತು ಸಮುದ್ರ ತೀರಗಳಿಗೆ ತೆರಳುವಾಗ ಅತ್ಯಂತ ಎಚ್ಚರಿಕೆಯಿಂದಿರಬೇಕು ಹಾಗೂ ಸುರಕ್ಷಿತರಾಗಿರಬೇಕು ಎಂದು ಇಲಾಖೆ ಮನವಿ ಮಾಡಿದೆ.
