ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವಂತೆ ಅಲ್ಲಿನ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶದ ನಂತರ ಇದೀಗ ಅವರ ಪಕ್ಷಕ್ಕೆ ಚುನಾವಣಾ ಆಯೋಗವು ಅಧಿಕೃತ ಚಿಹ್ನೆಯನ್ನು ನೀಡಿದೆ.
ವಿಜಯ್ ಪಕ್ಷಕ್ಕೆ ‘ವಿಷಲ್’ (ಸಿಳ್ಳೆ)
ಶಕ್ತಿ ನಟ ವಿಜಯ್ ಸ್ಥಾಪಿಸಿರುವ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷಕ್ಕೆ ಚುನಾವಣಾ ಆಯೋಗವು ‘ವಿಷಲ್’ (Whistle) ಚಿಹ್ನೆಯನ್ನು ಮಂಜೂರು ಮಾಡಿದೆ. ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಪಕ್ಷದ ಸಂಘಟನೆಯಲ್ಲಿ ತೊಡಗಿರುವ ವಿಜಯ್, ಇತ್ತೀಚೆಗಷ್ಟೇ ಚೆನ್ನೈನಲ್ಲಿ ತಮ್ಮ ಮೊದಲ ಚುನಾವಣಾ ಪ್ರಚಾರ ಸಮಿತಿ ಸಭೆಯನ್ನು ನಡೆಸಿದ್ದರು.
ಸಾಮಾಜಿಕ ನ್ಯಾಯ ಮತ್ತು ಪಾರದರ್ಶಕ ಆಡಳಿತದ ತತ್ವಗಳ ಅಡಿಯಲ್ಲಿ ಪಕ್ಷದ ಪ್ರಣಾಳಿಕೆ ರೂಪಿಸಲು ಟಿವಿಕೆ ಮುಂದಾಗಿದೆ. ಈ ಸಭೆ ನಡೆದ ಕೇವಲ ಎರಡೇ ದಿನಗಳಲ್ಲಿ ಚುನಾವಣಾ ಆಯೋಗದಿಂದ ಪಕ್ಷಕ್ಕೆ ಅಧಿಕೃತ ಚಿಹ್ನೆ ದೊರೆತಿರುವುದು ವಿಜಯ್ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ.
ಕಮಲ್ ಪಕ್ಷಕ್ಕೆ ‘ಬ್ಯಾಟರಿ ಟಾರ್ಚ್’
ಮತ್ತೊಂದೆಡೆ, ಮತ್ತೊಬ್ಬ ದಿಗ್ಗಜ ನಟ ಕಮಲ್ ಹಾಸನ್ ಅವರ ನೇತೃತ್ವದ ‘ಮಕ್ಕಳ್ ನೀಧಿ ಮೈಯ್ಯಂ’ (ಎಂಎನ್ಎಂ) ಪಕ್ಷಕ್ಕೂ ಸಿಹಿ ಸುದ್ದಿ ಸಿಕ್ಕಿದೆ. ಭಾರತೀಯ ಚುನಾವಣಾ ಆಯೋಗವು ಎಂಎನ್ಎಂ ಪಕ್ಷಕ್ಕೆ ಗುರುವಾರ ‘ಬ್ಯಾಟರಿ ಟಾರ್ಚ್’ ಚಿಹ್ನೆಯನ್ನು ಹಂಚಿಕೆ ಮಾಡಿದೆ.
ಮುಂಬರುವ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಿಗಾಗಿ ಈ ಪಕ್ಷಗಳಿಗೆ ಸಾಮಾನ್ಯ ಚಿಹ್ನೆಗಳನ್ನು ನೀಡಲಾಗಿದ್ದು, ತಮಿಳುನಾಡು ರಾಜಕೀಯ ಅಖಾಡದಲ್ಲಿ ತಾರಾ ವರ್ಚಸ್ಸಿನ ಈ ಇಬ್ಬರು ನಾಯಕರ ನಡೆ ಈಗ ಕುತೂಹಲ ಕೆರಳಿಸಿದೆ.


